ಭಾರತ, ಏಪ್ರಿಲ್ 19 -- ಕರ್ನಾಟಕದ ಹಲವು ಹವ್ಯಾಸಿ ರಂಗತಂಡಗಳು ಸ್ವರ್ಣವರ್ಷದ ಸಂಭ್ರಮದಲ್ಲಿರುವಾಗ ಒಂದರ್ಥದಲ್ಲಿ ಮಲೆನಾಡು ಕರ್ನಾಟಕದ ಸಾಂಸ್ಕೃತಿಕ ನಗರಿಯಾದ ಶಿವಮೊಗ್ಗೆಯ ʻನಮ್ ಟೀಮ್ʼ ಹವ್ಯಾಸಿ ರಂಗ ತಂಡಕ್ಕೆ ಈ ವರ್ಷ ರಜತ ಸಂಭ್ರಮ. ಈ ಸಂಭ್ರಮದ ಹಿನ್ನೆಲೆಯಲ್ಲಿ ಶೂದ್ರಕ ಮಹಾಕವಿಯ ಸಾರ್ವಕಾಲಿಕ ಪ್ರಸ್ತುತ ನಾಟಕ ʻಮೃಚ್ಛಕಟಿಕʼ ಆಧರಿಸಿದ ʻವಸಂತಸೇನೆʼ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ. ಈ ನಾಟಕ ಏಪ್ರಿಲ್‌ 20ರಂದು ಭಾನುವಾರ ಸಂಜೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಕುವೆಂಪು ರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ʻಮೃಚ್ಛಕಟಿಕʼ ಸಂಸ್ಕೃತ ನಾಟಕ ಸಾಹಿತ್ಯದಲ್ಲೇ ಒಂದು ಅಚ್ಚರಿಗೊಳಿಸುವ ಕೃತಿ. ಇದನ್ನು ರಚಿಸಿದ ಶೂದ್ರಕ, ಭಾಸ, ಕಾಳಿದಾಸರಂಥ ಅಸಾಧಾರಣ ನಾಟಕಕಾರರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡೂ ತೇಜಸ್ಸುಗೆಡದೆ ಉಳಿದಿದ್ದಾನೆ ಎನ್ನುವುದೇ ಇದಕ್ಕೆ ಸಾಕ್ಷಿ.

ಸ್ಪಷ್ಟವಾಗಿ ಅವನದ್ದೆಂದು ನಮಗೆ ದೊರೆತಿರುವ ಪೂರ್ಣ ನಾಟಕ ಇದೊಂದೇ. ಭಾಸ ಮತ್ತು ಕಾಳಿದಾಸರಿಗಿದ್ದಂತೆ ಒಂದಿಲ್ಲೊಂದು ಕೃತಿಯ ಬೆಂಬಲ ಇವನಿಗಿಲ್ಲ. (ಅವನ ʻವ...